ಟಿಕೆಎಂ ಚುನಾಯಿತ ಪ್ರತಿನಿಧಿಗಳ ಉಪವಾಸ ಸತ್ಯಾಗ್ರಹ ಆರಂಭ
ಕಾರ್ಮಿಕ ಇಲಾಖೆಯ ಏಕಪಕ್ಷೀಯ ನಿಲುವು, ಆಡಳಿತ ಮಂಡಳಿಯ ಕಾರ್ಮಿಕ ದಮನ ನೀತಿಗಳ ವಿರುದ್ಧದ ಕಾರ್ಮಿಕ ಹೋರಾಟ ಪ್ರತಿಪಕ್ಷಗಳು ಸೇರಿದಂತೆ ರಾಷ್ಟ್ರದ ಗಮನ ಸೆಳೆಯುತ್ತಿದೆ.


ಬಿಡದಿ: ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ ಟೊಯೋಟಾ ಕಾರ್ಮಿಕ ಸಂಘ, ಟೊಯೋಟಾ ಗೃಹ ನಿರ್ಮಾಣ ಮಂಡಳಿ ಹಾಗೂ ಟೊಯೋಟಾ ಸಹಕಾರ ಪತ್ತಿನ ಸಹಕಾರ ಸಂಘದ ಎಲ್ಲಾ ಚುನಾಯಿತ ಪ್ರತಿನಿಧಿಗಳು ಇಂದು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
https://youtu.be/rFVnP6ZgUoU
ಸರ್ಕಾರ ಹಾಗೂ ಕಾರ್ಮಿಕ ಇಲಾಖೆಗಳು ಇದ್ದು-ಇಲ್ಲದಂತೆ, ಕಂಡು-ಕಾಣದಂತೆ ವರ್ತಿಸುತ್ತಿರುವ ಸನ್ನಿವೇಶದಲ್ಲಿ ಕಾರ್ಮಿಕರು ತಮ್ಮ ಹೋರಾಟದ ಭಾಗವಾಗಿ ಇಂದು ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಾರ್ಖಾನೆ ಮುಂಭಾಗ ಸಂಸ್ಥೆಯ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸುತ್ತಾ, ಕಾರ್ಮಿಕರು ನಡೆಸುತ್ತಿರುವ ಸ್ವಾಭಿಮಾನಿ ಹೋರಾಟವೂ 57ನೇ ದಿನಕ್ಕೆ ಕಾಲಿಟ್ಟಿದೆ.
ಟೊಯೋಟಾ ಆಡಳಿತ ವರ್ಗ ಮತ್ತು ಕಾರ್ಮಿಕ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇನ್ನು, ಕಾರ್ಮಿಕ ಇಲಾಖೆಯು ವಸ್ತುಸ್ಥಿತಿ ಅರಿಯಲು ಕಾರ್ಖಾನೆಯನ್ನು ಪರಿಶೀಲನೆ ಮಾಡದೆ ಆಡಳಿತ ಮಂಡಳಿಯ ಪರ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿರುವುದರಿಂದ ಕಾರ್ಮಿಕರು ವಿಭಿನ್ನ ರೀತಿಯ ಪ್ರತಿಭಟನೆಗಳ ಮೂಲಕ ದೇಶ, ವಿದೇಶಗಳ ಗಮನ ಸೆಳೆಯುತ್ತಿದ್ದಾರೆ.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು 65 ಕಾರ್ಮಿಕರ ಅಮಾನತ್ತು, 57 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು, ವಿರೋಧ ಪಕ್ಷಗಳು ಟಿಕೆಎಂಇಯು ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.